ಸೋಮವಾರ, ಏಪ್ರಿಲ್ 25, 2011

ಬೀಭತ್ಸ ದುಃಸ್ವಪ್ನ...

ಆ ದೇಶದ ರಾಜಾದಿರಾಜ.                      
ರೋಗ-ರುಜಿನಗಳ ಈಟಿ ಹಿಡಿದ
ಅವನ ಸೈನಿಕರು.
ದಂಡೆತ್ತಿ ಬಂದರು ಊರಿಗೆ..!
ರುಂಡಗಳ ಕತ್ತರಿಸಿದರು.
ಕೆಲವರ ಕೈ-ಕಾಲುಗಳು
ನೋಡುತ್ತಿದ್ದವರ ಕಣ್ಣುಗಳ ಕಿತ್ತರು.
ಗಹಗಹಿಸಿ ನಕ್ಕರು..!

ನೆಲವನಪ್ಪಿದ ನಿಸ್ತೇಜಸ್ಸುಗಳಿಗೆ
ನಾಯಿ-ಕಾಗೆ- ರಣಹದ್ದುಗಳು
ವೈದ್ಯರಾದರು.
ಹುಳ-ಹುಪ್ಪಟೆ ತಿನ್ನುವ ಪಕ್ಷಿಗಳು
ದಾದಿಯರಾದರು.!

ಶಸ್ತ್ರಚಿಕಿತ್ಸೆ ಸಂಪೂರ್ಣ
ಅವೆಲ್ಲವೂ ಕೈ ತೊಳೆದು
ರಕ್ತದ ಮುಖ ವರೆಸಿ ಪೌಡರ‍್ ಬಳಿದು
ಒಂದು ತೇಗಿನೊಂದಿಗೆ ಹಾರಿದವು...!
ಇರುವೆಗಳು ರಕ್ತದ ಹೊಳೆಯಲ್ಲಿ
ರುಂಡ-ಮುಂಡಗಳ ಶುಚಿಗೊಳಿಸಿ
ಹಾಯಾಗಿ ಮೈಮುರಿದು ಹಲ್ಲುಕಿರಿದವು...!

ಆಗಸವೇ ಕಳಚಿ ಬಿದ್ದ
ರುಂಡ-ಮುಂಡಗಳ ಹೆಂಡತಿಯರು
ಸೆರಗು ಹಿಡಿದ ಅವರ ಮಕ್ಕಳು
ಸಾವಿನ ಸಂತೆಯಲಿ ಜೈಕಾರ ಕೂಗಿದರು..!
ಸ್ಮಶಾನದ ಮನೆಯಲ್ಲಿ
ಮುಸಿಮುಸಿ ಅತ್ತರು...!

ಮತ್ತೊಮ್ಮೆ ಬರುತ್ತಾನೆ ರಾಜಾದಿರಾಜ
ಈಟಿ ಹಿಡಿದ ಅವನ ಸೈನಿಕ
ಮುಖಮುಚ್ಚಿ ಅಳುವರು ವಿಧವೆಯರು.
ಬೆಳಕು ಸತ್ತ ಕೋಣೆಯಲಿ
ಅವರ ಮಕ್ಕಳು...!
----------------------------------------------------
  • ರವಿ ಮೂರ್ನಾಡ್‍

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ