ಭಾನುವಾರ, ಏಪ್ರಿಲ್ 17, 2011

ಮನದ ಕದವನು ತೆರೆದು....


   ಎಲ್ಲ ಉದ್ಯೋಗಗಳಿಗೂ "ಡಿಗ್ರಿ" ,"ಸರ್ಟಿಫಿಕೇಟ್‍"ಗಳ ಅಗತ್ಯವಿದೆ. ಒಂದು ಕವಿತೆ,ಕಥೆ,ಲೇಖನ,ಕಾದಂಬರಿ ಬರೆಯಲು ಇದರ ಅಗತ್ಯವಿಲ್ಲ.ಯಾವುದೇ ಪಠ್ಯ ಪುಸ್ತಕಗಳ ಅಗತ್ಯವೂ ಇಲ್ಲ.ಒಬ್ಬ ಬರಹಗಾರ ಎಲ್ಲೂ ಒಂದು ಕೃತಿಯನ್ನು ಓದಿ, ಆಸಕ್ತಿ ಬೆಳಸಿ ಅದರಂತೆ ಬರೆಯಬೇಕೆನ್ನುವ ಹಂಬಲದಿಂದ ಸಾಹಿತ್ಯ ಪ್ರಪಂಚವನ್ನ ಪ್ರವೇಶಿಸುತ್ತಾನೆ.ಯಾವುದೇ ಆದಾಯ, ಬಡ್ತಿ, ಮಾನ್ಯತೆ ಈ ಒಂದು ಪ್ರಪಂಚದ " ಪ್ರಾಸ್ಪೆಕ್ಟ್"ನಲ್ಲಿ  ಇಲ್ಲ.
          ಅನುಭವಗಳಿಂದ ಒಬ್ಬ ವ್ಯಕ್ತಿ ಬರವಣಿಗೆಯನ್ನ ಸಿದ್ಧಿಸುತ್ತಾನೆ ಎನ್ನುವ ಸಾಮಾನ್ಯ ಮಾತುಗಳು ಕೇಳಿ ಬರುತ್ತವೆ.ಆದರೆ,ಅತೀ ವಿಚಿತ್ರವೂ,ಅದ್ಭುತವೂ ಆದ ಅನುಭವಗಳಿರುವ ವ್ಯಕ್ತಿಗೆ ಯಾಕೆ ಬರವಣಿಗೆ ಸಾಧ್ಯವಾಗುವುದಿಲ್ಲ?ಒಂದು ಸಾಮಾನ್ಯ ಅನುಭವವಿರುವ ಒಬ್ಬ ವ್ಯಕಿ ಹೇಗೆ ಬರಹಗಾರನಾಗುತ್ತಾನೆ? ಅದೇ ತೀರಾ ಸಾಮಾನ್ಯವಾದ ಅನುಭವವಿರುವ ವ್ಯಕ್ತಿ ಯಾಕೆ ಬರಹಗಾರನಾಗುವುದಿಲ್ಲ?
          ಒಂದು ಸಾದಾರಣ ವಸ್ತು ವಿಷಯದಲ್ಲೂ ಕೆಲವು ಒಳನೋಟಗಳನ್ನು ಕಂಡುಕೊಳ್ಳುವ ವ್ಯಕ್ತಿಗೆ ಬರವಣಿಗೆ ಸಾಧ್ಯವಾಗುತ್ತದೆ.ಈ ಸಮಾಜದಲ್ಲಿ ಪ್ರತಿಯೊಂದು ಘಟನೆ ಧಾರುಣವೊ, ಭೀಕರವೂ ಆಗಿದ್ದಲ್ಲಿ,ಒಬ್ಬೊಬ್ಬ ವ್ಯಕ್ತಿ ಅದಕ್ಕೆ ಸಾಕ್ಷಿಯಗಿ ತನ್ನದೇ ಆದ ಮಾನವೀಯ ಸಂವೇದನೆಗಳನ್ನು ಬೆಳೆಸಿಕೊಂಡಿರುತ್ತಾನೆ.ಆದರೆ, ಶೀಘ್ರ ಗತಿಯ ಬದುಕಿನ ಜಂಜಡದಲ್ಲಿ- ಗೊಂದಲದಲ್ಲಿ ಈ ಸವೇದನೆಗಳನ್ನು ಹುಟ್ಟು ಹಾಕಬಹುದಾದ ಸೂಕ್ಷ್ಮ ಭಾವನೆಗಳು ಕ್ಷಣದಲ್ಲಿ  ಮಾಯಾವಾಗಬಹುದು.
          ನಮ್ಮ ಬದುಕು ಅಸ್ತವ್ಯಸ್ತತೆಯಿಂದ ಕೂಡಿದೆ ಅಂತ ಒಬ್ಬ ಬರಹಗಾರ ಯಾವಾಗ ಕಂಡುಕೂಳ್ಳುತ್ತಾನೋ ಆಗ ಅವನ ಬರವಣಿಗೆ ಸೃಜನಶೀಲವಾಗುತ್ತದೆ. ಈ ಸೃಜನಶೀನಲತೆಯ ಅಸ್ತವ್ಯಸ್ತತೆಗಳು ಮನಸ್ಸಿನಲ್ಲಿ ಹುಟ್ಟಿ, ಸಂವೇದನೆಗಳು ಭಾರವಾಗಿ ತಡೆಯೂಡ್ಡುತ್ತವೆ. ಆಗ ಬರಹಗಾರ, ತನ್ನ ಮನಸ್ಸಿನಂತೆ ಬದುಕು ಕೂಡ ಅಸ್ತವ್ಯಸ್ತತೆಯಿಂದ ಕೂಡಿದೆ ಅಂತ ಕಂಡುಕೊಳ್ಳುತ್ತಾನೆ.
          ಬರಹ ನಿಜವಾದಾಗ,ಬದುಕು ನಿಜವಾಗುತ್ತದೆ.ಬರಹಗಳು ಕೇವಲ ತಮಾಷೆಗಾಗಿ ಕಟ್ಟಿದ ಪದಗಳಲ್ಲ,ಒಂದು ಕ್ಷಣದಲ್ಲಿ ತೇಲಿ ಬಿಡುವಂತದ್ದೂ ಅಲ್ಲ, ಅಥವಾ ಅವು  ನಿಮ್ಮ ಮಗು ಆಟವಾಡುವ ಆಟದ ಸಾಮಾನುಗಳೂ ಅಲ್ಲ. ಓರ್ವ ಬರಹಗಾರ,ಸಮಾಜದ ಚಿತ್ರಣವನ್ನೋ,ಮನದ ತಳಮಳಗಳನ್ನೋ,ಹಪಹಪಿಯನ್ನೋ ತನ್ನದೇ ಆದ ಶೈಲಿಯಲ್ಲಿ ತಿಳಿಸಲು ಪ್ರಯತ್ನಿಸುತ್ತಾನೆ,ನಿಮಗೆ ಒಪ್ಪಿಸುತ್ತಾನೆ. ನಿಮ್ಮ ಮನದ-ಮನೆಯ ಅಂತರಂಗವನ್ನು ಬಣ್ಣದ ರಂಗೋಲಿಯಿಂದ ವಿವರಿಸಲು ಉದ್ಯುಕ್ತನಾಗುತ್ತಾನೆ.ಅದು ಅವನ ಜೀವನವಾಗಿರುತ್ತವೆ.         
          ಅಸ್ಯವ್ಯಸ್ತತೆಗಳು ಪ್ರಕೃತಿಯ ನಿಯಮ.ಇದಕ್ಕೊಂದು ನೆಲೆ ಕಲ್ಪಿಸಬೇಕೆನ್ನುವುದು ನಮ್ಮ ಕನಸು.ಅಸ್ತವ್ಯಸ್ತ ಬದುಕಿನಂತೆಯೇ ನಮ್ಮ ಮನಸ್ಸು.ಅದಕ್ಕೊಂದು ರೂಪ ಕೊಡಲು ಪ್ರಯತ್ನಿಸುವುದೇ ಸೃಜನಶೀಲ ಬರಹಗಾರನ ಬರವಣಿಗೆಯ ಆರಂಭ. ಒಂದು ವಿಧದ ಮೌನ ಧ್ಯಾನ.
          ಕೆಲವರಿಗೆ ಅನ್ನಿಸಬಹುದು ಕಂಡದ್ದರಲ್ಲಿ ಕವಿತೆಯಿದೆ,ಕೇಳುವುದರಲ್ಲಿ ಕತೆಯಿದೆ  ಅಂತ .ವಸ್ತುಗಳಿಗಾಗಿ ಹುಡುಕುತ್ತಿರುವಾಗ, ವಸ್ತುಗಳೇ ನಮ್ಮನ್ನು ಹುಡುಕುತ್ತಿರುತ್ತವೆ.ಇದು ಓರ್ವ ಸೃಜನಶೀಲ ಬರಹಗಾರ ಮಾತ್ರ ಕಂಡುಕೊಳ್ಳುತ್ತಾನೆ. ಅವುಗಳನ್ನು ಸ್ವಾಗತಿಸುವುದು ಅವನ ಧರ್ಮ...! ಮನಸ್ಸಿನ ಕಿಟಕಿಗಳ ಗುರುತು  ಹಿಡಿದು ಒಳ ಬರುತ್ತವೆ,ಇದೊಂದು ಮೌನ ಪ್ರೇರಣೆ..!.ಬರಹದ ಮೂಲಕ ಕೃತಜ್ಞತೆ ಹೇಳುತ್ತೇವೆ.
          ಕುವೆಂಪು,ಬೇಂದ್ರೆ,ಕಾರಂತ ಮೊದಲಾದವರು ಬರೆದ ಕಟ್ಟುಕತೆಗಳೇ ಆಗಲಿ ಮಹಾಸತ್ಯಗಳಾಗಿ ನೆಲೆ ನಿಂತಿರುವುದನ್ನು ನೋಡಿದ್ದೇವೆ.ತಲೆಮಾರುಗಳಿಂದ ನಡೆದು ಬಂದ ಬೇತಾಳನ ಕತೆಗಳು,ಅಜ್ಜಿಯ ಕತೆಗಳು ಇಂದಿಗೂ ಕೂಡ ಜೀವಂತವಾಗಿವೆ.ವಿಜ್ಞಾನ ಶಾಸ್ತ್ರ, ರಾಜಕೀಯ ಮೀಮಾಂಸೆ, ತತ್ತ್ವಶಾಸ್ತ್ರಗಳು,ಕಟುಸತ್ಯಗಳೆಂದು ನಾವು ಓದಿದ್ದೇವೆ.ಆದರೆ ಆಧುನಿಕ ಯಾಂತ್ರಿಕ ಬದುಕಿನ ಹೊಸ ಅನ್ವೇಷಣೆಯಲ್ಲಿ ಅರ್ಧ ಸತ್ಯಗಳಾಗಿ  ಉಳಿದು ಹೋಗುತ್ತಿವೆ.ಅನುಚಿತವೆಂದೂ,ಅನೈತಿಕವೆಂದು ಸಾರಿದ ಸಿದ್ಧಾಂತಗಳಿಂದು ,ಅವುಗಳ "ಲಕ್ಷ್ಮಣ ರೇಖೆ"ಯನ್ನು ದಾಟಿ ಹೊರ ಬಂದಿದೆ.
          ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸೂಕ್ಷ್ಮ ಸಂವೇದನೆಗಳನ್ನು ಕಲಾತ್ಮಕ ಬರವಣಿಗೆಗಳಿಂದ ಶ್ರೀಮಂತಗೊಳಿಸಿದವರು ಹಲವರು.ಇದಕ್ಕೆ ತಮ್ಮ ಜೀವನಾನುಭವವನ್ನೇ ಬಳಸಿಕೊಂಡವರೂ ಇದ್ದಾರೆ.ನಮ್ಮ ಸಮಾಜದ ಅನೇಕ ಘಟನೆಗಳು,ಗಂಡು-ಹೆಣ್ಣುಗಳು,ಅಸಂಖ್ಯಾತ ಜೀವಿಗಳು,ಅವರ ವಸ್ತು ವಿಷಯಗಳಾಗಿ ಬರಹದ ಮೂಲಕ ಬದುಕು ಪಡೆದಿವೆ.ಕತೆ-ಕವಿತೆ,ಲೇಖನದಲ್ಲಿ ಅವರು ಮಾತನಾಡುತ್ತಾರೆ.ಅವರು ಜೀವಂತವಾಗುತ್ತಾರೆ.
          ಮನುಷ್ಯಾವಸ್ತೆಗಳನ್ನ ಬರಹದಲ್ಲಿ  ಜೀವಂತವಾಗಿಸಲು ಸಾಧ್ಯವಿದೆ.ಅದೇ ರೀತಿ ಸತ್ತು ಹೋದವರನ್ನು ಬರಹದಲ್ಲಿ ಕಂಡುಕೊಳ್ಳಲು ಸಾಧ್ಯವಿದೆ.ನಿಮ್ಮ ಬರಹದ ಪದಗಳು ನಿಮ್ಮ ಕಾಲದ ನಂತರವೂ ಮಾತನಾಡುತ್ತವೆ.ಅದಕ್ಕೆ ಸಾಕ್ಷಿಗಳೂ ನಮ್ಮ ಮುಂದಿದೆ.
-ರವಿ ಮೂರ್ನಾಡ್‍     
---------------------------------------------------------------------------------

ಮನದ ಕದವನು ತೆರೆದು....

ನಿಲುಮೆ | May 14, 2011 at 12:11 am | Categories: ಲೇಖನಗಳು | URL: http://wp.me/p14FzR-Ad
----------------------------------------------------------------------------------

4 ಕಾಮೆಂಟ್‌ಗಳು:

  1. ಎಲ್ಲರೂ ಬರೆಯಬಹುದು, ಬರಹದೊಳಗಿನ ಭಾವನೆಗಳು ನನ್ನವೆ ನನ್ನ ಸುತ್ತಮುತ್ತಲಿನವೆ ಅಂತನ್ನಿಸಿದಾಗ ಮಾತ್ರ ಅಂತಹ ಬರಹಗಳು ಬರೆದದ್ದನ್ನ ಓದಿಸುವುದು, ಓದಿಸಿಕೊಂಡು ಹೋಗುವುದು ಇದೆ ಇರಬೇಕು ಮಾಸ್ತಿ, ಬೇಂದ್ರೆ, ಕಾರಂತರ, ಪುಟ್ಟಪ್ಪನವರ ಕಥೆಗಳಲ್ಲೂ ಜೀವಂತಿಕೆ ಮೈದುಂಬಿ ನಿಂತದ್ದು, ಬಹುಷಃ ಇದೇನಾ ಸೃಜನಶೀಲತೆ ಅಂದ್ರೆ.

    ಪ್ರತ್ಯುತ್ತರಅಳಿಸಿ
  2. ತುಂಬಾ ಆಸಕ್ತಿಕರವಾದ ಮತ್ತು ಮಾಹಿತಿಭರಿತ ವಿಚಾರವಂತ ಲೇಖನ. ನಿಮಗೆ ಧನ್ಯವಾದಗಳು
    Sir@

    ಪ್ರತ್ಯುತ್ತರಅಳಿಸಿ
  3. This article is great. I am sure everybody can discover something new and helpful in it. kamagra online

    ಪ್ರತ್ಯುತ್ತರಅಳಿಸಿ
  4. I have learned a lot from your post and I am glad that there are still people with such great ideas. order cialis

    ಪ್ರತ್ಯುತ್ತರಅಳಿಸಿ