ಸೋಮವಾರ, ಸೆಪ್ಟೆಂಬರ್ 24, 2012

ಕವಿತೆ ಹೀಗೆ ಇರುವುದು !

ಕವಿತೆ ಹೇಗೆ ಹುಟ್ಟುವುದು
ನವಜಾತ ಶಿಶು ಉತ್ತರವಾಗುವುದು
ಕಣ್ಣಿದ್ದೆಡೆ ಬೆರಗು ತೆರೆದು
ಲೋಕ ಓದುವುದು !

ಕೈಯಿದ್ದೆಡೆ ಕಾಲಿದ್ದರೆ 
ಹೇಗೆ ನಡೆವುದು ?
ಮೂಗಿದ್ದೆಡೆ ಗಾಳಿ ಹೃದಯಕೆ
ಲಯ ಸುರಿವುದು !

ಕವಿತೆ ಹೀಗೇ ಇರುವುದು
ಅರಿವಿಗೆ ಜಾರುವುದು

ಗ೦ಟಲಿದ್ದೆಡೆ ಸ್ವರ ಸಿಡಿದರೆ  
ಅಮ್ಮಾ ಎನುವುದು !
ಉದರವಿದ್ದೆಡೆ ಹಸಿವಿದ್ದರೆ 
ಹಾಲು ಕುಡಿವುದು !

ದ್ವಾರವಿದ್ದೆಡೆ ಕರಗಿ ಕೆಳಮುಖ
ಅಮೇಧ್ಯ ಪಲ್ಲಟವಾಗುವುದು !
ಅರಿವಿಲ್ಲದೆಡೆ ಉಕ್ಕಿ ಮೇಲ್ಮುಖ
ನಾಲಗೆ ನಾರುವುದು !

ಕವಿತೆ ಹೀಗೇ ಇರುವುದು
ಬದುಕಿಗೆ ಓಡುವುದು

ತೆವಳುತ್ತಿದ್ದೆಡೆ ಎಡವಿ ನಡೆದರೆ
ಓಟ ಕಲಿವುದು !
ಕನಸು ಕರೆದೆಡೆ ಓಡುತ್ತಿದ್ದರೆ  
ಗುರಿ ಜಗವಾಗುವುದು !

ಹೃದಯವಿದ್ದೆಡೆ ಮನಸ್ಸಿದ್ದರೆ 
ತುಟಿ ಮಲ್ಲಿಗೆ ನಗುವುದು !
ಅಳುತ್ತಿದ್ದೆಡೆ ಹೃದಯ ಬಿಂದಿಗೆ
ಕಣ್ಣ ಬಾಯಿಗೆ ತುಳುಕುವುದು !

ಕವಿತೆ ಹೀಗೇ ಇರುವುದು...

ಮು೦ಡವಿದ್ದೆಡೆ ರು೦ಡವಿದ್ದರೆ  
ಪ್ರತಿಮೆ ನೇರ ನಿಲುವುದು !
ಓದುತ್ತಿದ್ದೆಡೆ ನಡೆವುದು !
-ರವಿ ಮುರ್ನಾಡು

ಭಾನುವಾರ, ಸೆಪ್ಟೆಂಬರ್ 16, 2012

ನಮ್ಮ ಕವಿತೆ !

ಹಲವು ಜನರ ಮೂಲ ಹುಡುಕಿ
ಅರಿವು ಪಡೆದೆವು!
ನಮ್ಮ ಮೂಲ ಹುಡುಕುವಲ್ಲಿ
ಎಡವಿ ಬಿದ್ದೆವು !

ಹೆತ್ತ ತಾಯಿ ದೇವರೆಂದು
ಮಕ್ಕಳಾದೆವು  !
ಗುಡಿ-ಮಸೀದಿ-ಚರ್ಚು ನುಗ್ಗಿ
ಭಕ್ತರಾದೆವು !

ದೇಹದೊಳಗೆ ಮನವ ಬಿಗಿದು
ಚರ್ಮವಾದೆವು !
ಬೀದಿ ನಡೆಗೆ ಬಣ್ಣ ಬಳಿದು
ಬೆತ್ತಲಾದೆವು !

ಊರು ತಪ್ಪು ನೂರು ಮಾಡಿ
ಜಗಳ ಕಾದೆವು !
ಮನೆಗೆ ಹರಿವ ಕೊಚ್ಚೆ ನೊಣಕೆ
ಎಂಜಲಾದೆವು !

ತಪ್ಪ ಒಪ್ಪಿ ನೆಂಟನೆಂದು
ಮೆಚ್ಚಿಕೊಂಡೆವು !
ನಮ್ಮ ನಮ್ಮ ತಪ್ಪುಗಳನು
ಮುಚ್ಚಿಕೊಂಡೆವು !

ನಮ್ಮವರ ಕತ್ತಲೆಗಳಿಗೆ
ದೀಪವಾದೆವು !
ನಮ್ಮ ಮನದ ಕೋಣೆಯಲ್ಲಿ
ಕತ್ತಲಾದೆವು !

ಹಲವು ಜನರ ಯಾತ್ರೆಯನ್ನು
ನೋಡುತ್ತಿದ್ದೆವು !
ನಮ್ಮ ಯಾತ್ರೆಯನ್ನು ನಾವೇ
ಕಾಣದಾದೆವು !
-ರವಿ ಮುರ್ನಾಡು

ಶುಕ್ರವಾರ, ಸೆಪ್ಟೆಂಬರ್ 14, 2012

ಬೂದಿಯಾಗಲಿ ಕೆಂಡ

ಉರಿ ಬೆಂಕಿ ಉಸಿರ
ಮನದಲ್ಲೇಕೆ ಸಿಲುಕುವಿರೋ
ಸರಿದು ರಕ್ಶಿಸಿಕೊಳ್ಳಿರೋ
ಧಗ ಧಗನೆ ಉರಿದು ಬೆಂಕಿ
ಸುಮ್ಮನಾಗಲಿ !
 
ಉ೦ಡ ಹಿಡಿ ಅನ್ನಕೆ
ಉದರಾಗ್ನಿ ಉಕ್ಕಿ
ಉರಿ ಗಂಟಲ ತಿಕ್ಕಿ
ತುಪ್ಪವಾಗಿ ಎಂಜಲು ನಾಲಗೆಯಲಿ !
ಉಗಿದು ತೃಪ್ತಿಗೆ ಹಿಗ್ಗಿ
ತುಟಿಯೊರೆಸಿ ಮತ್ತೆ ಉಗಿದು ಸುಗ್ಗಿ
ಓಡಿ ತಪ್ಪಿಸಿಕೊಳ್ಳಿರೋ
ಬೂದಿಯೊಳಗಿನ ಕೆಂಡ ಬೂದಿಯಾಗಲಿ !
 
ಹಸಿ ಕೆ೦ಡದ ಹಸಿವು 
ಉಣ್ಣುವ ಕರಗಳ ಮುರುಟಿ
ತಾಳದ ನಡೆ ತಪ್ಪಿ ತರಗುಟ್ಟದಿರಲಿ !
ಚರ್ಮ ಸುಟ್ಟರೆ ಸುಡಲಿ
ಕಸಿ ಮಾಡಿ ಮುಖ ಮುಚ್ಚಿ
ಹೇಗಾದರೂ ತಪ್ಪಿಸಿಕೊಳ್ಳಿರೋ
ಕಣ್ಣೀರು ಬೆಂಕಿಗೆ ನದಿ
ಗಂಗೆ ತಾಯಿ ಭಾರತಿ ಪುತ್ರಿ !
-ರವಿ ಮುರ್ನಾಡು

ಬುಧವಾರ, ಸೆಪ್ಟೆಂಬರ್ 12, 2012

ಹಕ್ಕಿ ಹಾರುತ್ತಲಿದೆ ...!


ಅದೋ ಹಕ್ಕಿ ಹಾರುತ್ತಲೇ ಇದೆ
ರೆಕ್ಕೆ ಸೋತಾಗ ಹಸಿದು
ಹಣ್ಣಿರುವ ಮರದಿ ಕೂರಬಹುದು !
ಬೀದಿ ಕಾಳನು ಹೆಕ್ಕಿ
ಸಂಜೆ ಗೂಡಿಗೆ ಮರಳಬಹುದು  !

ಹದ್ದಾದರೋ.. !?
ವರ್ತಮಾನಗಳ ಸುತ್ತಾ ಹಿಗ್ಗಿ
ಸತ್ತವರ ಹೆಣದ ಹುತ್ತ ಕೆದಕಬಹುದು !
ಹ್ಞೂಂ...ಕರಿಸಬಹುದು
ಭಯ ಉಕ್ಕಿ ಗೂಬೆ
ಶುಭ ಶಕುನದ ಹಕ್ಕಿಗಳು
ಸಂಜೆಗೆ ಮರಳಬಹುದು !
ಕೊಕ್ಕಿಗೆ ಹಲ್ಲಿ ಲೊಗುಟ್ಟಬಹುದು !

ಕಾಗೆಯಾದರೋ ...!?
ಕಪ್ಪೆ೦ದು ಬಿಳಿ ಕನಸಿರಬಹುದು
ಅವರಿವರ ಕಣ್ಣೀರ ಕೊಳದಲಿ
ಸ್ನಾನಕ್ಕಿಳಿಯಬಹುದು !
ಓಡುವ ಇಲಿ- ಕತ್ತೆತ್ತುವ ಮರಿ ಕೋಳಿ
ಕಾಲಡಿ ಸರಿವ ಉರಗಗಳ
ಉದರ ತುಂಬಿಸಿ ತೇಗಬಹುದು
ಸಂಜೆಗೆ ಅವುಗಳೂ ಮರಳಬಹುದು !

ನಾನೀಗ ಕೋಗಿಲೆಯಾಗುತ್ತೇನೆ...
ಶ್....ಸುಮ್ಮನಿರಿ
ಮಾಮರದ ಚಿಗುರೆಲೆ ಮೋಹಿಸಿ
ತತ್ತಿಯಿಡುತ್ತೇನೆ...ಗೂಡಿಗೆ
ಕಾಗೆ ಬರುವುದರೊಳಗೆ ಹಾರಿ !

ಇದೋ ಇದೋ ಮಾಮರ
ಅರೆ...! ಮತ್ತೊಂದಿದೆ ಕೋಗಿಲೆ
ಯಾವ ಕಾಗೆ ಗೂಡಿನ ತ್ತತ್ತಿಯೋ ?!
ಜೊತೆ ಸೇರಿ ಕುಹೂ ಸ್ವರ ಸೇರುತ್ತೇನೆ !
-ರವಿ ಮೂರ್ನಾಡು

ಭಾನುವಾರ, ಸೆಪ್ಟೆಂಬರ್ 9, 2012

ಹೀಗೊಂದು ಕನ್ನಡ ರಾಜ್ಯೋತ್ಸವ ನುಡಿ ಪ್ರಶಸ್ತಿ !



ಜಗದಗಲದ ಯಾವುದೋ ಮೂಲೆಯಲ್ಲಿ ಕುಳಿತು ಸದ್ದಿಲ್ಲದೆ ಯಾರೋ ಕವಿತೆ-ಕಥೆ ಬರೆದರು. ತಮ್ಮದೇ ಅನುಭವದ ವಿಶಿಷ್ಟ ಬರಹದ ಸಾಹಿತ್ಯ ಬರೆದು ಪ್ರಕಟಣೆಗೆ ದಿಕ್ಕಿಲ್ಲದೆ ಹತಾಶಾರಾದರು. ಅಂತಹವರ ಸಂಖ್ಯೆ ಸಾವಿರಾರು. ತಾವು ಬರೆದದ್ದು ಸಾಹಿತ್ಯವೇ? ಅಥವ ಪ್ರಕಟಣೆಗೆ ಯೋಗ್ಯವೇ, ಯಾರಾದರೂ ಓದುವರೇ ಅಂತ ಮುಜುಗರ ಪಟ್ಟವರು ಹಲವರು. ಅಂತಹ ಬರಹಗಳನ್ನು ಹುಡುಕಿ ಪ್ರಕಟಿಸಿ "ನಿಮ್ಮ ಬರಹ ಶ್ರೇಷ್ಠವಾದುದು" ಎಂದು ಜಗತ್ತಿನ ಕನ್ನಡಿಗರಿಗೆ ತೋರಿಸಿಕೊಟ್ಟ "ಅವಧಿ ಮಾಗ್", "ಕೆಂಡಸಂಪಿಗೆ" ಅಚ್ಚ ಕನ್ನಡ ಸೃಜನಶೀಲ ಸಾಹಿತ್ಯ ತಾಣಗಳಿಗೆ , ಹೊರನಾಡ ಕನ್ನಡಿಗರ ಅಭಿಮಾನ ’ಗಲ್ಫ್ ಕನ್ನಡಿಗ" ಅಂತರ್ಜಾಲ ಸುದ್ದಿ ಮನೆಗೆ ಕನ್ನಡ ರಾಜ್ಯೋತ್ಸವದ ಸಾವಿರ ಅಭಿನಂದನೆಯ  ಚಪ್ಪಾಳೆಗಳು. ಆ ಮೂಲಕ ಮುಂಬರುವ ರಾಜ್ಯೋತ್ಸವದ ನುಡಿ ಪ್ರಶಸ್ತಿಯನ್ನು ಅಭಿಮಾನ ಪೂರ್ವಕವಾಗಿ ಹೊರನಾಡ ಕನ್ನಡಿಗರು ವಿಶ್ವಕ್ಕೆ ಹಂಚಿಕೊಳ್ಳುತ್ತೇವೆ.

ನವೆಂಬರ್ ಒಂದು ತಿಂಗಳ ಕನ್ನಡದ ಆವೇಶದಲ್ಲಿ ಇಡೀ ಒಂದು ವರ್ಷದ ತಾಕತ್ತು ಪಡೆದುಕೊಳ್ಳುವ ದೌರ್ಬಲ್ಯ ಕನ್ನಡಿಗರದ್ದು. ಅದಕ್ಕಾಗಿ ನಿಜದ ಮುಖವಾಡಗಳನ್ನು ಕಳಚಿ ಛದ್ಮವೇಷದ ಮೇಕಪ್ ಮೆತ್ತಿಕೊಳ್ಳುತ್ತೇವೆ. ಜೀವವಿಲ್ಲದ ಕವೆಡೆ ಕಾಸಿನ ಸಮಾರಂಭಗಳಷ್ಟೋ. ಒಂದೆರಡು ಗಂಟೆಗಳ ನಾಯಕರ ಭಾಷಣದಲ್ಲಿ ಅಭಿಮಾನದ ಪುಣ್ಯ ಕಟ್ಟಿಕೊಂಡವರೆಷ್ಟೋ, ನೆಲದ ಕನ್ನಡಿಗರನ್ನೇ ಬಡವರನ್ನಾಗಿಸಿ, ಕನ್ನಡವನ್ನೇ ಬಂಡವಾಳವಾಗಿಸಿ ಜೀವನ ವ್ಯಾಪಾರ-ವರ್ಚಸ್ಸು ಕುದುರಿಸಿದವರೆಷ್ಟೋ. ಕನ್ನಡ ಕುಸಿಯುತ್ತಿದೆ ಅನ್ನುವ ಅನುಮಾನ ಕಾಡುವಾಗ ಹೋರಾಟ ನಡೆಸಿದ್ದೇವೆ. ಅಲ್ಲಲ್ಲಿ ಭುಗಿಲೆದ್ದ ಕಾರಣಗಳ ವಿರುದ್ದ ದ್ವನಿಯೆತ್ತಿ ಅಸ್ತಿತ್ವಕ್ಕಾಗಿ ಜಗಳಕ್ಕೆ ನಿಂತಿದ್ದೇವೆ. ಇಂತಹ ವ್ಯವಸ್ಥೆಯಲ್ಲಿ ಸಾಹಿತ್ಯವನ್ನು ನೆಲದ ತಾಯಿ ಭಾಷೆಯಲ್ಲಿ ಓದಿ ಆನಂದಪಟ್ಟಿದ್ದೇವೆ. ನೆಲ ಬಿಟ್ಟು ನೆಲದಲ್ಲಿ ಕನ್ನಡವನ್ನು ಆಸ್ವಾಧಿಸಿದ್ದೇವೆ. ಇದು ಲಕ್ಷಾಂತರ ಹೊರನಾಡ ಕನ್ನಡಿಗರ ಎದೆಯಾಳದ ಮಾತು. ಕನ್ನಡದ ಚಿನ್ನದ ಅಕ್ಷರಗಳ ಮಮತೆಯನ್ನು ದುಬೈಯ ಅಪ್ಪಟ ಕನ್ನಡ ಪ್ರೇಮಿ ಬಿ.ಜಿ. ಮೋಹನ್ ದಾಸ್ ಬೀಜೂರು ಕಟ್ಟಿದ "ಗಲ್ಪ್ ಕನ್ನಡಿಗ", ಕಥೆಗಾರ-ಕವಿ ಜಿ.ಎನ್. ಮೋಹನ್ ಸಾರಥ್ಯದ "ಅವಧಿ ಮಾಗ್", ಸೃಜನಶೀಲ ಕಥೆಗಾರ ಅಬ್ದುಲ್ ರಶೀದ್ ಧಾರೆಯೆರೆಯುತ್ತಿರುವ "ಕೆಂಡ ಸಂಪಿಗೆ’ಯ ಅಂತರ್ಜಾಲಗಳನ್ನು ಮತ್ತೆ ಮತ್ತೆ ತೆರೆದು ನಾಡಿನ ಬರಹಗಾರರ ಸಾಹಿತ್ಯ ಮತ್ತು ಸುದ್ಧಿ ಆಸ್ವಾಧನೆಯ ಹಸಿವನ್ನು ಇಂಗಿಸಿಕೊಂಡಿದ್ದು ಸತ್ಯ.

ಬಹುಷಃ ಕನ್ನಡ ನಾಡಿನ ನೆಲ ರಾಜ್ಯೋತ್ಸವದ ಸಂಭ್ರಮದ ಖುಷಿಯಲ್ಲಿ ಕೆಲವಷ್ಟನ್ನು ಮರೆಯಬಹುದು. ಈ ಒಂದು ವಿಶ್ವಮಾನ್ಯ ಕನ್ನಡ ಹಬ್ಬವನ್ನು ಆಚರಿಸಿ ಮನೆ-ಮನದಲ್ಲಿ ಅಭಿಮಾನದ ಹಣತೆ ಹಚ್ಚಿ ಸಂಭ್ರಮಿಸುತ್ತೇವೆ. ಹಾಗಂತ, ಪಟಾಕಿ ಸಿಡಿಸಿ, ಭಾವುಟ ಹಾರಿಸಿ, ಕೆಲವಷ್ಟನ್ನು ಒಂದೆರಡು ದಿನದ ಸಮಾರಂಭಗಳಲ್ಲಿ ಕಳೆದುಕೊಳ್ಳುತ್ತಿದ್ದೇವೆ. ನಿರಂತರ ಕನ್ನಡ ಸೇವೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗಳ ಮುಖಾಮುಖಿಯಲ್ಲಿ ಉತ್ತರಕ್ಕಾಗಿ ಹುಡುಕಾಡುವ ಕಾಲ ಇನ್ನೂ ಬಂದಿಲ್ಲ. ಅದರ ಕಾರ್ಯ ಯಾವುದೇ ಚಿಂತೆಯಿಲ್ಲದೆ ನಡೆಯುತ್ತಿದೆ. ಸಂಪೂರ್ಣ ರಾಜಕೀಯಕ್ಕೆ,ಜಾತಿ-ಪಂಥಗಳಿಗೆ, ಎಡಪಂಥೀಯ ನಕರಾತ್ಮಕ ಚಿಂತನೆಗೆ ಬಲಿಯಾಗಿರುವ ಇಂದಿನ ಅವ್ಯವಸ್ಥೆಯಲ್ಲಿ ಕೆಲವಷ್ಟನ್ನು ಅನುಭವದ ಆಳಕ್ಕೆ ಕನ್ನಡದ ನೆಲ ತೆಗೆದುಕೊಳ್ಳಲಿಲ್ಲ. ಅದಕ್ಕಾಗಿ ಜಗದಗಲದ ಕನ್ನಡ ಓದುಗರ ಪರವಾಗಿ ಈ ನುಡಿ ಪ್ರಶಸ್ತಿ. ಕನ್ನಡ ಜನ ಮಾನಸದಲ್ಲಿ "ಗಲ್ಫ್ ಕನ್ನಡಿಗ", "ಅವಧಿ ಮಾಗ್ " ಮತ್ತು "ಕೆಂಡ ಸಂಪಿಗೆ" ತಾಣಗಳ ಅಭಿಮಾನ ಸದಾ ಆಶಾಭಾವನೆ ಚಿಮ್ಮಿಸುವ ಫಲಕವಾಗಿ ನಿಲ್ಲಲಿ.

ಈ ಹಿಂದಿನ ಕನ್ನಡದ ಸ್ಥಿತಿಗಿಂತ ಪ್ರಸಕ್ತ ಸ್ಥಿತಿಯನ್ನು ಈ ಮೂರು ಅಂತರ್ಜಾಲ ತಾಣಗಳು ಸಾಹಿತ್ಯಕ ಅಭಿಮಾನದಲ್ಲಿ ಜಗತ್ತಿನಾದ್ಯಂತ ಬಲಿಷ್ಠಗೊಳಿಸಿರಬಹುದು. ಅದನ್ನು ವಿಶ್ವದ ಕನ್ನಡಿಗರು ಅಂದಾಜಿಗೆ ತೆಗೆದುಕೊಂಡಿದ್ದಾರೆ. ಕನ್ನಡ ನಾಡಿನ ಪತ್ರಿಕಾ ಸಮೂದಾಯಗಳು ಅದಕ್ಕೆ ಬೆಂಬಲ ನೀಡಿದವು. ಸೃಜನಶೀಲ ಸಾಹಿತ್ಯದ ಕನ್ನಡದ ಸವಿ ಯೆತೇಚ್ಚವಾಗಿ ಬೆಳೆದಿರುವುದು ದಿಟವಾಗಿದೆ. ಫೇಸ್ಬುಕ್ಕು ಕನ್ನಡವನ್ನು ಬಲಿಷ್ಠಗೊಳಿಸಿದ್ದು ಇನ್ನೊಂದು ಸಂತಸದ ಸುದ್ಧಿ. ಸಾಹಿತ್ಯವನ್ನು ಹುಡುಕಿ ಗುರುತಿಸಿ ಸದ್ದಿಲ್ಲದೆ ಬೆಳೆಸುವ ಈ ಅಂತರ್ಜಾಲ ತಾಣಗಳ ಕನ್ನಡ ಸೇವೆಗೆ ಹೊರನಾಡ ಕನ್ನಡಿಗರು ಸದಾ ಅಭಾರಿಯಾಗಿದ್ದೇವೆ. ಕಳುಹಿಸಿದ ಬರಹ ಪ್ರಕಟವಾದ ನಂತರ ಅಲ್ಲಿ ಬರಹಗಾರ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾನೆ. ಅದರ ಅಡಿಪಾಯ ಕಾಣುವುದೇ ಇಲ್ಲ. ಆ ಸ್ಥಿತಿ ಈ ಮೂರು ಅಂತರ್ಜಾಲ ಸಾಹಿತ್ಯದ ಚಿನ್ನದ ತಟ್ಟೆಗಳದ್ದು. ಅಂತರ್ಜಾಲ ವ್ಯವಸ್ಥೆಗಳಲ್ಲಿ ಕನ್ನಡ ಸಾಹಿತ್ಯದ ರಸದೌತಣವನ್ನು ನೆಲದವರಿಗೆ ಮತ್ತು ಹೊರನಾಡ ಕನ್ನಡಿಗರಿಗೆ ಹೊಟ್ಟೆ ತುಂಬುವಷ್ಟು ಬಡಿಸಿಕೊಟ್ಟಿತು.

ಅಧುನಿಕ ವ್ಯವಹಾರಿಕ ಬದುಕಿನಲ್ಲಿ ಜಾಹೀರಾತುಗಳೇ ಪತ್ರಿಕೆಗಳ ಜೀವನಾಧಾರ. ದಿನ ಬೆಳಗಾದಲ್ಲಿ ಪತ್ರಿಕೆಗಳು ರವಾನಿಸುವ ಸುದ್ದಿಗಳಿಗಿಂತ ಅಂತರ್ಜಾಲಗಳು ಭಿತ್ತರಿಸಿ ಓದುಗರಿಗೆ ತಲಪಿಸುತ್ತವೆ. ಅದರಲ್ಲಿ ಫೇಸ್ಬುಕ್ಕು-ಟ್ವಿಟ್ಟರ‍್ ಜಾಲಗಳಿಗೆ ಮೊದಲ ಸ್ಥಾನ. ಆದಾಗ್ಯೂ ಅಂತರ್ಜಾಲದ ಪ್ರಭಲ ಸ್ಪರ್ಧೆಯ ನಡುವೆ ಪತ್ರಿಕೆಗಳ ಅಭಿಮಾನ ಕಡಿಮೆಯಾಗಿಲ್ಲ. ಸಾಹಿತ್ಯ ಅಭಿವೃದ್ಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಹಲವು ಸಾಹಿತ್ಯ ಪುಟಗಳು ಎದೆಯೊಳಗೆ ಪಿಸುಮಾತಿಗಿಳಿದಿವೆ. ಇದರ ಇನ್ನೊಂದು ಮಗ್ಗುಲಿನಲ್ಲಿ ಹೊಸ ಅಂದಾಜಿನ ಸಾಹಿತ್ಯ ಅಭಿರುಚಿಯ ಅಂತರ್ಜಾಲ ತಾಣಗಳನ್ನು ಕಾಣುತ್ತಿದ್ದೇವೆ. ಯಾವುದೇ ವಾಣಿಜ್ಯಕರಣಕ್ಕೆ ಸೊಪ್ಪು ಹಾಕದೆ ಕನ್ನಡವನ್ನು ಬೆಳೆಸುವ ಪರಿ ಹುಬ್ಬೇರಿಸುವಂತಹದ್ದು. ಅದನ್ನು "ಅವಧಿ ಮಾಗ್", "ಗಲ್ಫ್ ಕನ್ನಡಿಗ" ಮತ್ತು " ಕೆಂಡ ಸಂಪಿಗೆ" ಮುಂತಾದ ಮಾಹಿತಿಗೆ ಸಿಗದ ಸಾಹಿತ್ಯ ತಾಣಗಳು ಮಾಡುತ್ತಿವೆ. ಅವರ ಕನ್ನಡ ಸೇವೆಗೆ ಸಾಹಿತ್ಯ ಅಭಿಮಾನಿಗಳ ಅಸಂಖ್ಯ ಸಲಾಮು...! ಅರ್ಥಗರ್ಭೀತ ವಿಶ್ವಮಾನ್ಯ ಕನ್ನಡ ರಾಜ್ಯೋತ್ಸವದ ಸಂಭ್ರಮಕೆ ಈ ಮೂಲಕ ಸಾಹಿತ್ಯದ ಮಾನ್ಯತೆ ಓದುಗರ ಮನದಲ್ಲಿ ಶಾಶ್ವತವಾಗಲಿ.
-ರವಿ ಮೂರ್ನಾಡು, ಕ್ಯಾಮರೂನ್, ಮಧ್ಯ ಆಫ್ರೀಕಾ.

ಅಂತರ್ಜಾಲ ಸಾಹಿತ್ಯ ಪುಟಗಳ ಕೊಂಡಿಗಳು:
ಅವಧಿ ಮಾಗ್ : http://avadhimag.com/
ಗಲ್ಫ್ ಕನ್ನಡಿಗ : http://gulfkannadiga.com/  
ಕೆಂಡ ಸಂಪಿಗೆ : http://www.kendasampige.com/

ಶುಕ್ರವಾರ, ಸೆಪ್ಟೆಂಬರ್ 7, 2012

ಸಾಹಿತ್ಯ ಬರವಣಿಗೆಗೆ ಯಾವುದೇ ಶಾಲೆ-ಕಾಲೇಜು ಡಿಗ್ರಿ ಕೋರ್ಸುಗಳಿಲ್ಲ


ಸಾಹಿತ್ಯದಲ್ಲಿ ಯಾವುದೇ ಬಡ್ತಿ, ಮಾನ್ಯತೆ ಇಲ್ಲ. ಒಂದು ಕವಿತೆ-ಕಥೆ- ಕಾದಂಬರಿ- ಸೃಜನಶೀಲ ಬರಹ ಬರೆದು ಉದ್ಯೋಗ ಗಿಟ್ಟಿಸುವ ಯಾವುದೇ ಸರ್ಟಿಫಿಕೇಟಿನ ಭರವಸೆಯೂ ಇಲ್ಲ. ಕುಂಚ ಹಿಡಿದು ಚಿತ್ರ ಬರೆಯುವುದಕ್ಕೆ , ತಾಳಕ್ಕೆ ಹೆಜ್ಜೆ ಹಾಕಿ ನೃತ್ಯ ಮಾಡುವ ತರಗತಿಗಳಿವೆ, ರಾಗಕ್ಕೆ ಲಯ ಸೇರಿಸುವ ಸಂಗೀತ ಪಾಠ ಶಾಲೆಗಳಿವೆ. ನಟ-ನಟಿಯರಾಗಲು ಡಿಪ್ಲೋಮಾ ಕೋರ್ಸುಗಳಿವೆ. ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ತಿನ್ನುವ ಅನ್ನದ ಕೃಷಿ ಕ್ಷೇತ್ರಕ್ಕೆ,ಆರೋಗ್ಯ ಕ್ಷೇತ್ರಕ್ಕೆ, ಕ್ರೀಡೆಗಳಿಗೆ, ಸುದ್ದಿ ಮುಟ್ಟಿಸುವ  ಸುದ್ದಿ ಮಾಧ್ಯಮದ ವಿವಿಧ ಮುಖಗಳಿಗೆ, ಮನುಷ್ಯ ದೌರ್ಬಲ್ಯಗಳನ್ನು ಬಂಡವಾಳವಾಗಿಸಿ ಕೊಂಡ ವಾಣಿಜ್ಯಕರಣದ ಹಲವು ಮನೋ ವಿಕಲ್ಪಗಳಿಗೆ ಇವತ್ತು ಒಂದು ತಿಂಗಳಿನಿಂದ ಹಿಡಿದು ಹಲವು ವರ್ಷಗಳವರೆಗಿನ ಪ್ರವಚನ ನೀಡಿ ಕೈಗೊಂದು ಸರ್ಟಿಫಿಕೇಟು ಕೊಡುವ ಸಂಸ್ಥೆಗಳಿವೆ.
ಹಾಗೇ ಎಲ್ಲೆಂದರಲ್ಲಿ ಕಣ್ಣು ಹಾಯಿಸಿದಾಗ ಈ ವ್ಯವಹಾರಿಕ ಪ್ರಪಂಚದಲ್ಲಿ ಎಲ್ಲಾ ಕಲೆಗಳಿಗೂ, ನೈಪುಣ್ಯತೆಗಳಿಗೆ ಒಂದೊಂದು ತರಗತಿ ಪಾಠಶಾಲೆ, ಕಾಲೇಜುಗಳ ಡಿಗ್ರಿ ಸರ್ಟಿಪಿಕೇಟುಗಳು ಸಿಗುತ್ತವೆ. ಆದರೆ, ಸಾಹಿತ್ಯಕ್ಕೆ ಇಲ್ಲ. ಹಾಗಾದರೆ, ಓರ್ವ ಬರಹಗಾರ ಸಾಹಿತ್ಯ ಪ್ರಪಂಚಕ್ಕೆ ಹೇಗೆ ಮತ್ತು ಏಕೆ ಪ್ರವೇಶಿಸುತ್ತಾನೆ ಅನ್ನೋದು ಪ್ರಶ್ನೆ.

ಜನಮಾನಸವನ್ನು ಅತ್ಯಂತ ವೇಗವಾಗಿ ಸೆಳೆಯುವ ಸ್ಪರ್ಧೆಯೆಂದರೆ ಒಂದು ನೃತ್ಯ, ಇನ್ನೊಂದು ಸಂಗೀತ-ಸಿನೇಮಾ. ಇಂದಿನ ಮಾಧ್ಯಮ ವ್ಯವಸ್ಥೆಯಲ್ಲಿ ಇದರ ಅನುಭವವನ್ನು ಕಂಡುಕೊಂಡಿದ್ದೇವೆ. ನಿರಂತರ ಅಭ್ಯಾಸದ ತಾಲೀಮಿನಿಂದ, ದೃಢ ಮನಸ್ಸಿನಿಂದ ಇಂತಹ ಕಲೆಗಳನ್ನು ಸಾಧಿಸಬಹುದು. ಹಾಗಾದರೆ, ಸಾಹಿತ್ಯದ ಗುರಿ ಹೇಗೆ ಮತ್ತು ಎಲ್ಲಿಗೆ? ಇದಕ್ಕೊಂದು ಅಭ್ಯಾಸ ಮತ್ತು ತಾಲೀಮು ಒದಗಿಸಿ ಭರ್ಜರಿ ಪ್ರಚಾರ ಕೊಡುವ ಟೀವಿ ಮಾಧ್ಯಮಗಳ ಕೊಡುಗೆ ಇದೆಯೇ?

"ನಿಮಗೆ ಸಾಹಿತ್ಯದ ರಚನೆಗೆ ಆಸಕ್ತಿ ಇದೆಯೇ.. ಹಾಗಾದರೆ ಬನ್ನಿ ಒಂದು ತಿಂಗಳ ಕೋರ್ಸಿನಲ್ಲಿ ನೀವೊಂದು ಕವಿತೆ-ಕಥೆ ಬರೆಯಬಹುದು" ಎನ್ನುವ ಜಾಹೀರಾತನ್ನು ಎಲ್ಲಾದರೂ ಗಮನಿಸಿದ್ದೀರಾ?, ಇಂತಿಷ್ಟು ತಿಂಗಳ ಹಣ ಸಂಗ್ರಹಿಸಿ ತರಬೇತಿ ಕೊಡುವ ಸಂಸ್ಥೆಗಳನ್ನು ನೋಡಿದ್ದೀರಾ? ಸಿನೇಮಾಗಳಿಗೆ ಸಾಹಿತ್ಯ ಬೇಕು, ಕತೆ ಬೇಕು. ನಟ-ನಟಿಗೆ ಸಿಗುವ ಸಂಭಾವನೆಯಲ್ಲಿ ಸಿನೇಮಾ ಸಾಹಿತ್ಯದ ಕತೆಗಾರ, ಕವಿಗೆ ಕವಡೆ ಕಾಸಿನ ಸಂಭಾವನೆಯೂ ಸಿಗುವುದಿಲ್ಲ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಇಂಡಿಯನ್ ಐಡಿಯಾಲ್ ಅನ್ನುವ ಸ್ಪರ್ಧಾ ಕಣದಂತಹ ವೇದಿಕೆಯನ್ನು ಸಾಹಿತ್ಯಕ್ಕಾಗಿ ಯಾರಾದರೂ ಮಾಡಿದ್ದಾರೆಯೇ? ಏಕಿಲ್ಲ ಅನ್ನೋದು ಸಾವಿರ ಪ್ರಶ್ನೆ. ! . ಸಾಹಿತ್ಯವೂ ಒಂದು ಕಲೆ....ನೃತ್ಯ, ಸಂಗೀತ,ಬದುಕಿನ ನಾಟಕದ ನಟನೆ ಇದರಲ್ಲಿ ಮಿಳಿತವಾಗಿದೆ. ಹಾಗಾದರೆ ಸಾಹಿತ್ಯ ಏಕೆ ಓರ್ವ ಮನುಷ್ಯನನ್ನು ಆರ್ಥಿಕವಾಗಿ ಮೇಲೆತ್ತುವುದಿಲ್ಲ ಅನ್ನೋದು ಅನುಮಾನವನ್ನು ಕಾಡಿದೆ.

ಯಾವುದೋ ಮೂಲೆಯಲ್ಲಿ ಸಾಹಿತ್ಯ ಸ್ಪರ್ಧೆ ನಡೆಯುತ್ತಿದೆ. ಎಲ್ಲೋ ಮೂಲೆಯಲ್ಲಿ ಅತ್ಯಲ್ಪ ಪ್ರೇಕ್ಷಕರನ್ನು ಸೆಳೆದು ಕವಿಗೋಷ್ಟಿ, ಕಾವ್ಯಕಮ್ಮಟ, ಸಾಹಿತ್ಯ ಸಮಾರಂಭ ನಡೆಯುತ್ತಿದೆ. ಏಕಾಗಿ ನಡೆಯುತ್ತಿದೆ ಅಂದರೆ  ಉತ್ತರ ಶೂನ್ಯ.! ಓರ್ವ ಬರಹಗಾರ, ಸಾಹಿತಿ ತನ್ನ ಜೀವಮಾನ ಪೂರ್ತಿ ಬರೆದ ಸಾಹಿತ್ಯಕ್ಕೆ  ಇವತ್ತು ಭಾರತ ಸರಕಾರ ಕೊಡುವ ಜ್ಞಾನಪೀಠವೆಂಬ ಪ್ರಶಸ್ತಿಯ ಮೌಲ್ಯ  ಐದು ಲಕ್ಷ ರೂಪಾಯಿಯನ್ನು ದಾಟುವುದಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಒಂದು ಕವನ ಸಂಕಲನಕ್ಕೆ, ಕಥಾಸಂಕಲನಕ್ಕೆ, ಇನ್ನಿತರ ಸೃಜನಶೀಲ ಸಾಹಿತ್ಯ ಪ್ರಾಕಾರದ ಪುಸ್ತಕಗಳಿಗೆ ಕೆಲ ದಿನಗಳ ನಂತರ ತುಕ್ಕು ಹಿಡಿಯವ ಸ್ಮರಣಿಕೆ, ಹತ್ತು ಸಾವಿರ ದಾಟದ ಪ್ರಶಸ್ತಿ ಮೊತ್ತವನ್ನು ಕೊಟ್ಟು ಕೈತೊಳೆದುಕೊಳ್ಳುತ್ತವೆ. ಇದು ಸಾಹಿತಿಯ ಜೀವಮಾನದ ಸಾಧನೆಗೆ ಕಟ್ಟಿದ ಬೆಲೆ. ಅದೇ ಇಂಡಿಯನ್ ಐಡಿಯಲ್, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಲ್ಲಿ ವಿಜೇತರಾದರೆ ಪ್ರಶಸ್ತಿಯ ಮೊತ್ತ ಕೇವಲ ಒಂದು ವರ್ಷದ ಪ್ರದರ್ಶನದಲ್ಲಿ ಒಂದು ಕೋಟಿ ರೂಪಾಯಿಯನ್ನು ದಾಟುತ್ತದೆ. ಭೌತಿಕವಾಗಿ, ತಾಂತ್ರಿಕವಾಗಿ,ವೈಜ್ಞಾನಿಕವಾಗಿ ಮುಂದುವರೆದ ಸಮಾಜದಲ್ಲಿ ಇಂತಹ ಬೇಧವೇಕೆ ಬಂತು? ಹಾಗಾದರೆ ವಾಣಿಜ್ಯಕರಣದ ಪ್ರಭಲ ಪ್ರಲೋಭನೆಯ ಈ ಜಗತ್ತಿನಲ್ಲಿ ಸಾಹಿತ್ಯಕ್ಕೆ ಏಕೆ ಓರ್ವ ಮನುಷ್ಯ ಜೀವನವನ್ನು ಕೊಡುತ್ತಾನೆ ಮತ್ತು ಏಕೆ ಮುಡಿಪಾಗಿ ಇಡುತ್ತಾನೆ ಅನ್ನೋದು ಪ್ರಶ್ನೆ.

ಸಾಹಿತ್ಯ ಮನಸ್ಸಿನ ಕಲೆ, ಹಾಗಾಗಿ ಅದಕ್ಕೆ ತಯಾರಾಗಲು ತನಗೆ ತಾನೇ ಓರ್ವ ಮನುಷ್ಯ ಸಿದ್ದವಾಗಬೇಕಾಗುತ್ತದೆ. ಈ ಸಮಾಜದ ದೌರ್ಬಲ್ಯಗಳ ಸಂತೆಯಲ್ಲಿ ಅವನೇ ವ್ಯಾಪಾರಿ, ದಲ್ಲಾಳಿ ಮತ್ತು ಗ್ರಾಹಕ. ತನಗೇ ತಾನೇ ಓರ್ವ ಬರಹಗಾರ ಸರ್ಟಿಫಿಕೇಟು ಗಿಟ್ಟಿಸುವ ಏಕೈಕ ಕಲೆ ಎಂದರೆ ಮನಸ್ಸಿನ ಸ್ವಯಂ ನಿರ್ದೇಶಿತ ಸಾಹಿತ್ಯ ಬರಹದ ಭಾಷೆ. ಇವತ್ತು ಈ ಸಾಹಿತ್ಯ ಎಲ್ಲೆಂದರಲ್ಲಿ ಅನಾದಿ ಕಾಲದಿಂದ ತನ್ನ ಛಾಪನ್ನು ಮೂಡಿಸಿರಬಹುದು. ಈ ರೋಗಗ್ರಸ್ತ ಸಮಾಜವನ್ನು ತನ್ನ ಒಂದು ಬರಹದಿಂದ ತಿದ್ದಲು ಸಾಧ್ಯವಿಲ್ಲವೆಂದು ಬರಹಗಾರನಿಗೆ ಗೊತ್ತಿದೆ. ಅಡ್ಡಾದಿಡ್ಡಿಯಾಗಿ ಚಲಿಸುವ ಎಲ್ಲೋ ಯಾವುದೋ ಒಂದು ಮನಸ್ಸಿಗೆ ತನ್ನ ಮಾತು ಕೇಳಬಹುದು ಎಂದು ಅರಿತುಕೊಳ್ಳುತ್ತಾನೆ. ಅದರಂತೆ ಬರೆದು ತಲುಪಿಸುತ್ತಾನೆ. ತನ್ನ ಬರಹ ಅಂತಹ ಎದೆಗೆ ನಾಟುತ್ತದೆ ಎಂಬ ಒಂದೇ ಒಂದು ಆಶಾಭಾವನೆ ಓರ್ವ ಮನುಷ್ಯನನ್ನು ಸಾಹಿತ್ಯ ಪ್ರಪಂಚಕ್ಕೆ ಎಳೆದು ತರುತ್ತದೆ. ಆಗ ಸಮಾಜದ ಮನಸ್ಸುಗಳು ಮತ್ತು ಸಾಹಿತ್ಯ ಬರಹಗಾರ ಮಾತಾಡುತ್ತಾರೆ. ಇದು ಸಾಹಿತ್ಯ. ಇದನ್ನು ಸೂಕ್ತ ರೀತಿಯಲ್ಲಿ ತಲಪಿಸುವ ಕಾರ್ಯವನ್ನು ಸಾಹಿತ್ಯ ವೇದಿಕೆಗಳು ಮಾಡಿದವು. ಇಲ್ಲಿ ಸಾಹಿತಿ ಮತ್ತು ಸಾಹಿತ್ಯ ಪ್ರೇಮಿಗಳು ಭಾಷೆಯ ಕಾರ್ಯದಲ್ಲಿ ಮೇಲ್ಪಂಕ್ತಿಯಲ್ಲಿ ನಿಂತರು. ಹಾಗಾಗಿ, ಓರ್ವ ಮನುಷ್ಯ ತನಗೇ ತಾನೇ ಕಲಿತು,ವಿಶಿಷ್ಟ ರೀತಿಯಲ್ಲಿ ಪದಗಳ ನಿರೂಪಣೆಯನ್ನು ರೂಢಿಸಿಕೊಂಡ ಫಲವಾಗಿ ತನಗೇ ತಾನೇ ಸಾಹಿತ್ಯದ ಒಂದು ಸರ್ಟಿಫಿಕೇಟು ಗಿಟ್ಟಿಸಿಕೊಳ್ಳುತ್ತಾನೆ.ಆಗ ಓರ್ವ ಬರಹಗಾರ ಹುಟ್ಟಿಕೊಳ್ಳುತ್ತಾನೆ ಮತ್ತು ಹುಟ್ಟಿಸಿಕೊಳ್ಳುತ್ತಾನೆ.

ಮನುಷ್ಯನನ್ನು ಅವನ ಕನಸುಗಳು, ಆಸೆಗಳು ಗುರಿಯೆಡೆಗೆ ತಲಪಿಸುತ್ತವೆ. ಆದಿಲ್ಲದೆ ಮನಸ್ಸಿಗೊಂದು ಅರ್ಥವಿಲ್ಲ. ತನ್ನ ಈ ಜೀವಮಾನದಲ್ಲಿ ತನ್ನ ಕಾಲದ ನಂತರ ಇನ್ನೊಂದು ಜೀವನ ಇದೇ ಎನ್ನುವ ಕಲ್ಪನೆಯನ್ನು ಅಳವಡಿಸಿಕೊಂಡವನು ಮತ್ತೊಂದು ಜೀವ ಜೀವನ ಮೌಲ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳಬಹುದು. ಹಾಗಂತ, ಎಲ್ಲರಿಗೂ ಒಂದೇ ಜೀವನ, ಇದೇ ಒಂದು ಜೀವನದ ವರ್ತುಲದಲ್ಲಿ ಸಂತಸವನ್ನು ಕಂಡುಕೊಳ್ಳುವುದು ಅವನ ಮೂಲಧ್ಯೇಯವಾಗಿದೆ ಎಂದು ಸಾಹಿತ್ಯದಲ್ಲಿ ಅವನು ಪ್ರತಿಪಾದಿಸುತ್ತಾನೆ. ಅಲ್ಲಿ ಕನಸುಗಳು ಮಾತಾಡುತ್ತವೆ, ಆಸೆಗಳು ಏನನ್ನೋ ಹೇಳಲು ಉದ್ಯುಕ್ತವಾಗುತ್ತವೆ. ಮನಸ್ಸಿನ ನ್ಯಾಯ ಕಮ್ಮಟದಲ್ಲಿ  ಪ್ರತಿಪಾದಿಸುವ ಪ್ರತಿಯೊಂದು ಮಾತನ್ನು ನವೀನ ಭಾಷಾ ವೈಖರಿಯಲ್ಲಿ ಸಾಹಿತಿ ವಿವರಿಸುತ್ತಾನೆ. ಅದನ್ನು ಜಗತ್ತಿನ ನಾವು ಓದಿದ ಎಲ್ಲಾ ಸಾಹಿತ್ಯ ಪ್ರಾಕಾರಗಳಲ್ಲಿ ಕಾಣಬಹುದು. ಕನ್ನಡದಲ್ಲಿ ನಮಗೆ ಪರಿಚಯವಿರುವ ಪಂಪನಿಂದ ಹಿಡಿದು ನಮ್ಮ ನೆನಪಿನಲ್ಲಿರುವ ಈಗಿನ ತಲೆಮಾರಿನ ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿ,ಬಸವಣ್ಣ, ಅಕ್ಕ, ಸರ್ವಜ್ಞ, ದಾಸ ಸಾಹಿತ್ಯ, ಜಾನಪದಗಳು ಅಜರಾಮರವಾಗಿವೆ. ಇಂತಹ ಸಾಹಿತ್ಯ ಹುಟ್ಟಿಕೊಂಡಿದ್ದೆ  ಅವರ ಕಾಲಕ್ಕೆ ಮತ್ತು ನಂತರದ ಬದುಕಿಗೆ. ಇಲ್ಲವಾದ ಪರಿಕಲ್ಪನೆಯಲ್ಲಿ  ಮತ್ತೊಮ್ಮೆ ಇರುವಂತೆಯೇ. ಅವರು ಕಟ್ಟಿದ ಕಟ್ಟು ಕಥೆಯೇ ಇರಬಹುದು. ಅದು ವಾಸ್ತವ ಪ್ರಪಂಚಕ್ಕೆ ಮತ್ತೆ ಮತ್ತೆ ಎಡತಾಕುತ್ತವೆ. ಇಲ್ಲಿ ಎಲ್ಲವೂ ಸತ್ಯವಾಗಿದೆ. ಕವಿ ಕಲ್ಪನೆ ನಿಜ ಬದುಕಿನಲ್ಲಿ ಹೊಸ ಅಂದಾಜನ್ನು ಹೊರ ಹಾಕಿವೆ. ಹಾಗಾಗಿ, ಸಾಹಿತ್ಯಕ್ಕೆಂದೇ ಬರೆದುಕೊಂಡ ಸತ್ಯಗಳು ಇತಿಹಾಸದ ಮಜಲನ್ನು ದಾಟಿ ನಮ್ಮ ಈಗಿನ ಸಮಾಜದ ಮನುಷ್ಯರೊಂದಿಗೆ ಮಾತಾಡುತ್ತಿವೆ.ಅದು ಈಗಿನ ಸಾಹಿತಿಗಳ ಬರಹಗಳು ಮುಂದಿನ ಪೀಳಿಗೆಯಲ್ಲಿ ಸಂಭವಿಸುತ್ತವೆ.

ಉತ್ಕೃಷ್ಟ ಸಾಹಿತ್ಯ  ಹುಟ್ಟುವುದೇ ಹುಲ್ಲು ಗುಡಿಸಲ ಜೋಪಡಿಯಲ್ಲಿ, ನೋವು-ನಲಿವಿನ ಅನುಭವದಲ್ಲಿ, ಮಾನವೀಯತೆ ಅಂತಃಕರಣದಲ್ಲಿ, ಮನುಷ್ಯ ಜೀವನದ ಸಕಲ ದಿಕ್ಕುಗಳ ಅನುಭವವಿಲ್ಲದ ಸಾಹಿತ್ಯ ಸಾಹಿತ್ಯವೇ ಅಲ್ಲ. ಪ್ರೀತಿಯ ನೋವು ಮತ್ತು ನಲಿವು ಅರಿಯದ ಮನಸ್ಸು ಯಾರೊಂದಿಗೂ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ, ಮಾನವೀಯತೆಯೇ  ಇಲ್ಲದ ಮನಸ್ಸಿನಿಂದ ಹುಟ್ಟಿದ ನಾಟಕೀಯ  ಪದಗಳು ಬದುಕುವುದೇ ಇಲ್ಲ.ಆದ್ದರಿಂದ ಬರಹಗಾರ ಮಿಕ್ಕೆಲ್ಲ ಕಲೆಯ ಶ್ರೀಮಂತಿಕೆಯಿಂದ ಬಡವನಾಗಿ ಉಳಿದಿದ್ದಾನೆ. ಸಕಲ ನಲಿವಿನ ಭೋಗಗಳು ಕನಸುಗಳು ಮಾತ್ರ ಅವನ ಪಿಸುಮಾತಾಗಿರುತ್ತವೆ..ಆದ್ದರಿಂದ ಅವನಿಂದ ತನ್ನ ಪೀಳಿಗೆ ಮಾತ್ರವಲ್ಲ  ಮುಂದಿನ ಪೀಳಿಗೆಗೂ ಉಳಿಯುವ ಬರಹದ ಮಾತುಗಳು ಉಳಿಯುತ್ತವೆ. ಸಾಹಿತ್ಯ ಜಗತ್ತಿನ ಎಲ್ಲಾ ಕಲೆಗಳ ಅನುಭವದ ಪಟ್ಟಿ. ಅದು ಅವನ ಮನಸ್ಸಿನ ಭಾಷೆಯ ಅಳೆತೆಗೋಲು. ಅದಕ್ಕೆ ಯಾವುದೇ ಸಮ್ಮಾನವೂ ಸರಿಸಮಾನವಲ್ಲ. ಮನಸ್ಸಿನ ಅಸ್ತವ್ಯಸ್ತ ಭಾರಗಳು ಇಂದು ಮತ್ತು ನಾಳೆಗಳಿಗೆ ಬದುಕುವ ಪಾತ್ರಗಳು ಸಾಹಿತ್ಯವಾಗುತ್ತವೆ.
-ರವಿ ಮೂರ್ನಾಡು.